ನನ್ನ ಹವಾ ಎಲ್ಲೂ ಇಲ್ಲ, ಆದರೆ ಅನರ್ಹರು ಸೋಲೋದು ಫಿಕ್ಸ್!

Soma shekhar
ಹಿರೇಕೆರೂರು: ನಾನು ನಿಮ್ಮಂತೆ ಸಾಮಾನ್ಯ ಮನುಷ್ಯನೇ, ನಾನೇನು ಎಂಬುದು ಜನಕ್ಕೆ ಗೊತ್ತಿದೆ. ನನ್ನ ಹವಾ ಎಲ್ಲೂ ಇಲ್ಲ. ನನ್ನ ಕ್ಷೇತ್ರದಲ್ಲಿಯೂ ನನ್ನ ಹವಾ ಇಲ್ಲ. ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸಿ ಎಂದು ಹೇಳಲು ಬಂದಿದ್ದೇನೆ ಅಷ್ಟೇ ಎಂದು ಕನಕಪುರದ ಬಂಡೆ ಬಿಜೆಪಿ ವಿರುದ್ಧ ಸಿಡಿದೆದ್ದಿದೆ. 
 
ನಾನು ಭವಿಷ್ಯ ಹೇಳುವುದಿಲ್ಲ, ಯಡಿಯೂರಪ್ಪನವರ ಹಾಗೆ ಗಂಟೆ, ಗಳಗಂಟೆ ಬಾರಿಸುವುದಿಲ್ಲ. ಸಮ್ಮಿಶ್ರ ಸರಕಾರಕ್ಕೆ ಮೋಸ ಮಾಡಿ ಬಿಜೆಪಿ ಸೇರಿದ 15 ಅನರ್ಹರು ಈ ಉಪ ಚುನಾವಣೆಯಲ್ಲಿಸೋಲೋದು ಗ್ಯಾರಂಟಿ. ಅವರ ಸೋಲು ಸೂರ್ಯ ಚಂದ್ರರಷ್ಟೇ ಸತ್ಯ. ಜನರ ಅಮಾಯಕರಲ್ಲ, ಯಾರು ಏನು ಎಂದು ಅರಿತಿದ್ದಾರೆ. ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂದು ಮಾಜಿ ಸಚಿವ  ಡಿಕೆ ಶಿವಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 
ಕಾಂಗ್ರೆಸ್‌ ಅಭ್ಯರ್ಥಿ ಬಿಎಚ್‌ ಬನ್ನಿಕೋಡ್‌ ಪರ ಪ್ರಚಾರ ನಡೆಸಲು ಭಾನುವಾರ ಇಲ್ಲಿಗೆ ಆಗಮಿಸಿದ್ದ ವೇಳೆ ಹೆಲಿಪ್ಯಾಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ನನ್ನ ಹವಾ ಎಲ್ಲೂಇಲ್ಲ. ಕನಕಪುರದಲ್ಲೂಇಲ್ಲ. ಹವಾ ಮಾಡಲು ನಾನು ಇಲ್ಲಿಗೆ ಬಂದಿಲ್ಲ. ಬಿಜೆಪಿ ನೋಟು ಕಾಂಗ್ರೆಸ್‌ಗೆ ವೋಟು, ಬಿ.ಸಿ.ಪಾಟೀಲ್‌ ನೋಟು ಬನ್ನಿಕೋಡರಿಗೆ ವೋಟು ಅಂತ ಹೇಳಲು ಇಲ್ಲಿಗೆ ಬಂದಿದ್ದೇನೆ,” ಎಂದರು.‘‘ದೊಡ್ಡ ದೊಡ್ಡವರು ಸೇರಿ ಆಪರೇಷನ್‌ ಲೋಟಸ್‌ ಮಾಡಿದ್ದಾರೆ. ಸದ್ಯಕ್ಕೆ ಏನೂ ಹೇಳಲ್ಲ. ಡಿಸೆಂಬರ್‌ 3ರ ನಂತರ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ’’ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. 
 
‘‘ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು 60 ವರ್ಷ ರಾಜಕಾರಣ ಮಾಡಿದ್ದಾರೆ. ಅವರಿಗೆ ಜನರ ನಾಡಿ ಮಿಡಿತ ಗೊತ್ತಿದೆ. ದ್ರೋಹಿಗಳಿಗೆ ಪಾಠ ಕಲಿಸೋದು ನಮ್ಮ ಮುಂದಿರುವ ಒಂದೇ ಗುರಿ. ಯಡಿಯೂರಪ್ಪ ಆಫರ್‌ ಕೊಟ್ಟಿದ್ದರು ಅಂದಿದ್ದ ಬಿ.ಸಿ.ಪಾಟೀಲ್‌ ಅವರದ್ದು ಈಗ ಎಲ್ಲ ಆಚೆ ಬಂದಂತಾಗಿದೆ. ಬಹಳ ದಿನ ಸತ್ಯ ಮುಚ್ಚಿಡಲು ಆಗುವುದಿಲ್ಲ. ಇವರು ಮತ ಮಾರಿಕೊಂಡಿದ್ದಾರೆ ಎಂದು ಕ್ಷೇತ್ರದ ಜನರೇ ಪಕ್ಷ , ಜಾತಿ ಭೇದ ಮರೆತು ಅನರ್ಹರ ವಿರುದ್ಧ ಒಂದಾಗಿದ್ದಾರೆ’’ ಎಂದು ಹೇಳಿದರು. ‘‘ಸಂತೋಷ್‌ ಹೆಗ್ಡೆ, ದೊರೆಸ್ವಾಮಿಯಂಥ ಮೇಧಾವಿಗಳು ಅನರ್ಹರ ವಿರುದ್ಧ ಕರೆ ಕೊಟ್ಟಿದ್ದಾರೆ. ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂದು ಆತ್ಮವಿಶ್ವಾಸದ ನುಡಿಗಳನ್ನಾಡಿದ್ದಾರೆ.

Find Out More:

Related Articles: